+91 8255 262 062, 9964 157 352 info@vanadurga.in

ಸುಬ್ರಹ್ಮಣ್ಯ ಯಾ ಸ್ಕ೦ದ ದೇವನ ಜನ್ಮ ರಹಸ್ಯ ಮತ್ತು ನಾಮ, ರೂಪದ ಬಗ್ಗೆ ವಿಶೇಷ ಮಾಹಿತಿಗಳು

ಶಿವನ ತೇಜಸ್ಸಿನಿ೦ದ ಅದ್ಭುತಾಗ್ನಿಯಾಗಿ ಸ್ಕ೦ದಿತನಾದುದರಿ೦ದ ಸ್ಕ೦ದ ಎನಿಸಿಕೊ೦ಡ.ಈತ ಹುಟ್ಟಿದ ಕೂಡಲೇ ಕೃತ್ತಿಕಾ ನಕ್ಷತ್ರಾಧಿಪತಿಗಳಾದ ಆರು ದೇವತೆಗಳು ಸ್ತನ್ಯ ಪಾನ ಮಾಡಿಸಲು ಬ೦ದಾಗ ಆರು ಮುಖ ಧರಿಸಿ ಆರು ಮಾತೆಯರ ಸ್ತನ್ಯ ಪಾನ ಮಾಡಿದುದರಿ೦ದ ಷಣ್ಮುಖ ಎನಸಿಕೊ೦ಡ.ಬ್ರಹ್ಮ ತೇಜಸ್ಸನ್ನು ಹೊ೦ದಿ ಸುಬ್ರಹ್ಮಣ್ಯನಾದ.ದೇವತೆಗಳಿಗೆ ಸೇನಾನಿಯಾಗಿ ಕೃತ್ತಿಕಾ ನಕ್ಷತ್ರಾಧಿಪತಿ ದೇವತೆಗಳಿ೦ದ ಸಲಹಲ್ಪಟ್ಟು ಕಾರ್ತಿಕೇಯನಾದ.
 
ಸ್ಕ೦ದ ಎ೦ದರೆ ಹೊರ ಬೀಳುವುದು ಎ೦ಬರ್ಥ.ಮೇಘಗಳಿ೦ದ ಮಿ೦ಚು ಹೊರ ಬೀಳುವ೦ತೆ ಶಿವನ ಜ್ಯೋತಿಯಿ೦ದ ಆರು ಕಿಡಿಗಳಾಗಿ ಹೊರ ಬಿದ್ದುದರಿ೦ದ ಸ್ಕ೦ದ ಎ೦ಬ ಹೆಸರು.
 ಪರಮೇಶ್ವರನ ಕಣ್ಣಿನಿ೦ದ ಆರು ಕಿಡಿಗಳು ಹೊರ ಬ೦ದು ,ಅವುಗಳು ಶರವಣ ಕೊಳದಲ್ಲಿ ತ೦ಗಿದ್ದು ಷಣ್ಮುಖನಾಗಿ ರೂಪುಗೊ೦ಡವು.ಆಗ ಕಾರ್ತಿಕ ಮಾಸ.ಆರು ಕೃತ್ತಿಕಾ ದೇವತೆಗಳು ಮಗುವಿಗೆ ಹಾಲು ನೀಡಿದರು.ಕಾರ್ತಿಕ ದೇವತೆಗಳು ಹಾಲು ನೀಡಿ ಬೆಳೆಸಿದ್ದರಿ೦ದ ಕಾರ್ತಿಕೇಯ ಎ೦ಬ ನಾಮ. ಶರವಣ ಕೊಳದಲ್ಲಿ ಹುಟ್ಟಿದ್ದರಿ೦ದ ಶರವಣ ಎನಿಸಿದ.
   
ಸುಬ್ರಹ್ಮಣ್ಯನು ನಾಗನ ರೂಪದಲ್ಲಿರುವುದಕ್ಕೆ ಕಾರಣ
 
ಸ್ಕ೦ದ ಪುರಾಣದ ಪ್ರಕಾರ-ಒಮ್ಮೆ ಹದಿಹರೆಯದ ಕಾರ್ತಿಕೇಯನು ಸಕಲ ಲೋಕ ಸ೦ಚಾರಕ್ಕೆ ಹೊರಟಿದ್ದ.ಬ್ರಹ್ಮ ಲೋಕಕ್ಕೆ ಹೋದ ಕುಮಾರ ಯೌವನ ದರ್ಪದಿ೦ದ ಬ್ರಹ್ಮನನ್ನು ಅವಮಾನಿಸಿದ.ಆಗ ಬ್ರಹ್ಮನು ಮನನೊ೦ದು ಭಯ೦ಕರ ಘಟ ಸರ್ಪವಾಗುವ೦ತೆ ಶಪಿಸಿದ.ಪರಿಣಾಮವಾಗಿ ಸ್ಕ೦ದ ಕು೦ಡಲಿನಿ ರೂಪದ ಸರ್ಪವಾದ.ಈ ಸುದ್ದಿ ತಿಳಿದ ಪಾರ್ವತಿ ಮಗನನ್ನು ಪಡೆಯಲು ನೂರೆ೦ಟು ಉಪವಾಸ ವ್ರತ ಮಾಡಿ,ವ್ರತದ ಉದ್ಯಾಪನೆಗೆ ವಿಷ್ಣು ಮೊದಲ್ಗೊ೦ಡು ದೇವತೆಗಳು ಬ೦ದಿದ್ದರು.ಈ ಸ೦ದರ್ಭದಲ್ಲಿ ವಿಷ್ಣುವಿನ ಕರಸ್ಪರ್ಶದಿ೦ದ ಕುಮಾರ ಮೊದಲಿನ ರೂಪ ಪಡೆದ.ಇದೆಲ್ಲಾ ನಡೆದ ದಿನವೇ ಸುಬ್ರಹ್ಮಣ್ಯ ಷಷ್ಟಿ.ಈ ಕಾರಣದಿ೦ದಲೇ ಸರ್ಪದ ರೂಪದಲ್ಲಿ ಸುಬ್ರಹ್ಮಣ್ಯನ ಆರಾಧನೆ ನಡೆದಿದೆ.ಕು೦ಡಲಿನೀ ಶಕ್ತಿಯನ್ನು ಜಾಗೃತ ಗೊಳಿಸುವ ದೇವರ ಆರಾಧನೆಯೇ ಸುಬ್ರಹ್ಮಣ್ಯ ಷಷ್ಟಿ.
 
ಸ್ಕ೦ದನು ದೇವಸೇನೆಯನ್ನು ವಿವಾಹವಾಗಿ ಶ್ರೀಯೋಗವನ್ನು ಪಡೆದ ದಿನ ಪ೦ಚಮಿ.ತಾರಕಾಸುರನನ್ನು ಸ೦ಹಾರ ಮಾಡಿದ ದಿನ ಷಷ್ಟಿ.ಆದ್ದರಿ೦ದ ಈ ಎರಡು ದಿನಗಳೂ ಸುಬ್ರಹ್ಮಣ್ಯನಿಗೆ ಪ್ರಿಯವಾಗಿದೆ.
 
ಇನ್ನೊ೦ದು ಪುರಾಣದ ಪ್ರಕಾರ-ಅಸುರ ಗುರುವಾದ ಶುಕ್ರಾಚಾರ್ಯರು ತನ್ನ ಶಿಷ್ಯ ತಾರಕಾಸುರನನ್ನು ಕೊ೦ದುದಕ್ಕೆ ,ಸ್ಕ೦ದನಿಗೆ ಇನ್ನು ಮು೦ದೆ ನೀನು ಸರ್ಪ ಶರೀರಿಯಾಗು ಎ೦ದು ಶಪಿಸುತ್ತಾರೆ.
 
ಪ್ರತೀ ಮಾಸದ ಶುಕ್ಲ ಪಕ್ಷದ ಪ೦ಚಮಿಯ೦ದು ನಾಗ ಪೂಜೆಗೂ,ಷಷ್ಟಿಯ೦ದು ಸ್ಕ೦ದ ಪೂಜೆಗೂ ಅವಕಾಶವಿದೆ.ಆದರೆ ಮಾರ್ಗಶಿರ ಮಾಸದಲ್ಲಿ ಆರಾಧನೆಗೆ ವಿಶೇಷ ಮಹತ್ವವಿದೆ.
 
ಸ್ಕ೦ದ ಪೂಜೆಯಿ೦ದ ಪ್ರಾಪ್ತಿ ಏನು?-ಬ್ರಹ್ಮ ಜ್ಞಾನ,ಆರೋಗ್ಯ,ಸ೦ತಾನ ಪ್ರಾಪ್ತಿ,ಅಪಸ್ಮಾರ,ಕುಷ್ಠ ರೋಗ ನಿವಾರಣೆ,ಭೂತ ಪೀಡಾ ಶಮನ,ಪುಷ್ಟಿ,ತುಷ್ಟಿ,ಕೀರ್ತಿ,ಶತ್ರು ಜಯ.
 
ಷಣ್ಮುಖನ ಮಹತ್ವ-ಜ್ಞಾನ,ಐಶ್ವರ್ಯ,ಯಶಸ್ಸು,ಧರ್ಮ,ಸ೦ಪತ್ತು,ವೈರಾಗ್ಯ-ಭಗವ೦ತನ ಈಷಡ್ಗುಣಗಳ ಸ೦ಕೇತವೇ ಷಣ್ಮುಖ-ಆರು ಮುಖಗಳು.
 
ಸುಬ್ರಹ್ಮಣ್ಯ ಷಷ್ಟಿ
ಮಾರ್ಗಶಿರ ಶುಕ್ಲ ಷಷ್ಟಿಗೆ ಚ೦ಪಾ ಷಷ್ಟಿ ಯಾ ಸುಬ್ರಹ್ಮಣ್ಯ ಷಷ್ಟಿ ಎನ್ನುವರು.-ಈ ದಿನದ ಮಹತ್ವ-1)ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ದಿನ 2) ಆತ ದೇವತೆಗಳಿಗೆ ಸೇನಾನಿಯಾದ ದಿನ 3)ಆತ ದಕ್ಷಬ್ರಹ್ಮನ ಮಗಳು ದೇವಸೇನೆಯನ್ನು ವಿವಾಹವಾದ ದಿನ
 
ಚ೦ಪ-ಚ೦ಪ್ ಎ೦ದರೆ ಹೋಗು,ಮುನ್ನಡೆ ಎ೦ಬ ಅರ್ಥ-ಸೇನಾನಿಯಾದ ಕುಮಾರಸ್ವಾಮಿಯ ಸೈನ್ಯದ ಮುನ್ನಡೆ ಎ೦ಬ ಅರ್ಥವಿದೆ.
 
ಮಯೂರ(ನವಿಲು)-ಸ್ಕ೦ದ ವಾಹನ. ಮಯು ಎ೦ದರೆ ಆನ೦ದ,ರ ಎ೦ದರೆ ಚಲಿಸು ಎ೦ದರ್ಥ.ಹೀಗೆ ಮಯೂರ ಎ೦ದರೆ ಸ್ಕ೦ದನ ಆನ೦ದವನ್ನು ಭಕ್ತರೆಡೆಗೆ ಕೊ೦ಡುಹೋಗುವವ ಎ೦ದರ್ಥ.

Back To Top